ಉಪ ಲೋಕಾಯುಕ್ತರ ಬಳಿಗೆ ಬಂದ ದೇವದುರ್ಗ ತಾಲೂಕಿನ 1991ರ ಹಳೆಯ ಪ್ರಕರಣ
ಗಬ್ಬೂರಲ್ಲಿ ನಿವೇಶನಕ್ಕೆ ಹಂಚಿದ ಜಾಗ ಒತ್ತುವರಿ ದೂರು: ಸುಮೊಟೊ ಕೇಸ್ ದಾಖಲಿಸಿದ ಉಪ ಲೋಕಾಯುಕ್ತರು
ರಾಯಚೂರು ಆಗಸ್ಟ್ 30 (ಕ.ವಾ.): 1991ರಲ್ಲಿ ಹಂಚಿಕೆ ಮಾಡಿದ ಕರ್ನಾಟಕ ಸರ್ಕಾರದ ಆಶ್ರಯ ಯೋಜನೆಯಡಿಯ ನಿವೇಶನ ಹಕ್ಕುಪತ್ರ ಹಿಡಿದು ರಾಯಚೂರು ಕೃಷಿ ವಿವಿಯ ಆವರಣದ ಸಭಾಂಗಣದಲ್ಲಿ ಉಪ ಲೋಕಾಯುಕ್ತರಿಂದ ನಡೆಯುತ್ತಿದ್ದ ಬಾಕಿ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಆಗಮಿಸಿದ 66 ಫಲಾನುಭವಿಗಳ ಅಹವಾಲನ್ನು ಉಪ ಲೋಕಾಯುಕ್ತರಾದ ಬಿ ವೀರಪ್ಪ ಅವರು ಆಗಸ್ಟ್ 30ರಂದು ಆಲಿಸಿದರು.
ಮಧ್ಯಾಹ್ನ ಊಟದ ವಿರಾಮದ ನಂತರ ಉಪ ಲೋಕಾಯುಕ್ತರು, ಕಾರ್ಯಕ್ರಮದ ಸ್ಥಳವಾದ ಜಗಜ್ಯೋತಿ ಬಸವೇಶ್ವರ ಸಭಾಂಗಣಕ್ಕೆ ಆಗಮಿಸಿದಾಗ ಸಭಾಂಗಣದ ಬಾಗಿಲ ಬಳಿಯಲ್ಲಿ, ನಿವೇಶನ ಹಕ್ಕು ಪತ್ರಗಳ ಹಿಡಿದು ನಿಂತಿದ್ದ 20ಕ್ಕು ಹೆಚ್ಚು ಮಹಿಳೆಯರನ್ನು ಕಂಡು ಅವರ ಬಳಿ ತೆರಳಿ ಅವರ ಅಹವಾಲು ಆಲಿಸಿದರು.
ನಮ್ಮದು ದೇವದುರ್ಗ ತಾಲೂಕು. ಗಬ್ಬೂರು ಗ್ರಾಮದ ಸರ್ವೆ ನಂ.1007 ರಲ್ಲಿ ರಚಿಸಿರುವ 30*40 ವೀಸ್ತೀರ್ಣಯುಳ್ಳ ನಿವೇಶನಗಳನ್ನು 1991 ನವೆಂಬರನಲ್ಲಿ ಹಂಚಿಕೆ ಮಾಡಿದ್ದಾರೆ. ಆದರೆ, ಆ ಜಾಗವನ್ನು ಬೇರೆಯವರು ಒತ್ತುವರಿ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಉಪ ಲೋಕಾಯುಕ್ತರು, ಸ್ಥಳಕ್ಕೆ ದೇವದುರ್ಗ ತಹಸೀಲ್ದಾರ ಹಾಗೂ ಗಬ್ಬೂರ ಪಿಡಿಓ ಅವರನ್ನು ಕರೆದು ವಿಚಾರಿಸಿದರು. ಈ ಬಗ್ಗೆ ವಿಚಾರಣೆ ನಡೆಸಲು ಸಂಬಂಧಿಸಿದ ಅಧಿಕಾರಿಗಳ ಮೇಲೆ ಸ್ಥಳದಲ್ಲೇ ಸುಮೊಟೊ ಕೇಸ್ ದಾಖಲಿಸಿದರು.
What's Your Reaction?






